ಸಂಜು ೨೦೧೮ರ ಒಂದು ಹಿಂದಿ ಜೀವನಚರಿತ್ರಾತ್ಮಕ ಚಲನಚಿತ್ರ. ಇದನ್ನು ರಾಜ್‍ಕುಮಾರ್ ಹಿರಾನಿ ನಿರ್ದೇಶಿಸಿದರು ಮತ್ತು ಹಿರಾನಿ ಹಾಗೂ ಅಭಿಜಾತ್ ಜೋಶಿ ಬರೆದರು. ಇದನ್ನು ಅನುಕ್ರಮವಾಗಿ ರಾಜ್‍ಕುಮಾರ್ ಹಿರಾನಿ ಫ಼ಿಲ್ಮ್ಸ್ ಹಾಗೂ ವಿನೋದ್ ಚೋಪ್ರಾ ಫ಼ಿಲ್ಮ್ಸ್ ಲಾಂಛನಗಳಡಿ ಹಿರಾನಿ ಹಾಗೂ ವಿಧು ವಿನೋದ್ ಚೋಪ್ರಾ ಜಂಟಿಯಾಗಿ ತಯಾರಿಸಿದರು. ಈ ಚಿತ್ರವು ಬಾಲಿವುಡ್ ನಟ ಸಂಜಯ್ ದತ್‍ನ ಜೀವನ, ಮಾದಕ ವಸ್ತುಗಳೊಂದಿಗೆ ಅವರ ವ್ಯಸನ, ೧೯೯೩ರ ಮುಂಬೈ ಬಾಂಬ್ ಸ್ಫೊಟಗಳೊಂದಿಗೆ ಹೇಳಲ್ಪಟ್ಟ ಸಂಬಂಧಕ್ಕಾಗಿ ಬಂಧನ, ಅವರ ತಂದೆಯೊಂದಿಗಿನ ಸಂಬಂಧ, ಚಿತ್ರೋದ್ಯಮದಲ್ಲಿ ಪುನರಾಗಮನ, ಬಾಂಬ್ ಸ್ಫೋಟಗಳಿಂದ ಅಂತಿಮವಾಗಿ ಆರೋಪಗಳ ತೆಗೆದುಹಾಕುವಿಕೆ, ಮತ್ತು ಸೆರೆಮನೆ ಅವಧಿಯನೂ ಪೂರ್ಣಗೊಳಿಸಿದ ನಂತರ ಬಿಡುಗಡೆಯನ್ನು ಅನುಸರಿಸುತ್ತದೆ. ರಣ್‌ಬೀರ್ ಕಪೂರ್ ದತ್ ಆಗಿ ನಟಿಸಿದ್ದಾರೆ, ಜೊತೆಗೆ ಪರೇಶ್ ರಾವಲ್, ವಿಕಿ ಕೌಶಲ್, ಮನೀಷಾ ಕೊಯಿರಾಲಾ, ದಿಯಾ ಮಿರ್ಜ಼ಾ, ಸೋನಮ್ ಕಪೂರ್, ಅನುಷ್ಕಾ ಶರ್ಮಾ ಮತ್ತು ಜಿಮ್ ಸರ್ಭ್ ಇರುವ ಸಮೂಹ ಪಾತ್ರವರ್ಗವಿದೆ. ಹಿರಾನಿಯವರೊಂದಿಗಿನ ಸಂಭಾಷಣೆಯಲ್ಲಿ, ದತ್ ತಮ್ಮ ಜೀವನದ ಕಿರುಕತೆಗಳನ್ನು ಹಂಚಿಕೊಂಡರು. ಹಿರಾನಿಯವರಿಗೆ ಇವು ಆಸಕ್ತಿ ಹುಟ್ಟಿಸಿ ದತ್‍ರ ಜೀವನದ ಮೇಲೆ ಆಧಾರಿತವಾದ ಚಲನಚಿತ್ರವನ್ನು ತಯಾರಿಸುವಂತೆ ಪ್ರಚೋದಿಸಿತು. ಇದಕ್ಕೆ ದತ್‍ನ ತಾಯಿ ನರ್ಗಿಸ್ ಅವರನ್ನು ಕರೆಯಲು ಬಳಸುತ್ತಿದ್ದ ಅಡ್ಡಹೆಸರು ಸಂಜು ಎಂಬ ಶೀರ್ಷಿಕೆ ಇಡಲಾಯಿತು. ಪ್ರಧಾನ ಛಾಯಾಗ್ರಹಣವು ಜನವರಿ ೨೦೧೭ರಲ್ಲಿ ಆರಂಭವಾಗಿ ಜನವರಿ ೨೦೧೮ರಂದು ಮುಗಿಯಿತು. ಚಲನಚಿತ್ರದ ಧ್ವನಿವಾಹಿನಿಯನ್ನು ರೋಹನ್-ರೋಹನ್ ಹಾಗೂ ವಿಕ್ರಮ್ ಮಾಂಟ್ರೋಸ್ ಸಂಯೋಜಿಸಿದರು. ಎ. ಆರ್. ರಹಮಾನ್‌ ಅತಿಥಿ ಸಂಯೋಜಕರಾಗಿದ್ದರು. ಫ಼ಾಕ್ಸ್ ಸ್ಟಾರ್ ಸ್ಟೂಡಿಯೋಸ್ ಚಿತ್ರದ ವಿತರಣಾ ಹಕ್ಕುಗಳನ್ನು ಪಡೆಯಿತು. ಸಂಜು ವಿಶ್ವಾದ್ಯಂತ ೨೯ ಜೂನ್ ೨೦೧೮ರಂದು ಬಿಡುಗಡೆಗೊಂಡಿತು. ಇದು ವಿಮರ್ಶಕರಿಂದ ಸಕಾರಾತ್ಮಕ ವಿಮರ್ಶೆಗಳನ್ನು ಪಡೆಯಿತು. ಕಪೂರ್ ಹಾಗೂ ಕೌಶಲ್‍ರ ಅಭಿನಯವನ್ನು ಜೊತೆಗೆ ಹಿರಾನಿಯವರ ನಿರ್ದೇಶನವನ್ನು ಹೊಗಳಲಾಯಿತು; ಕೆಲವರು ಇದರ ನಾಯಕನ ಬಗ್ಗೆ ಇರುವ ಭಾವಿಸಲಾದ ಅಭಿಪ್ರಾಯದ ಶುದ್ಧೀಕರಣವನ್ನು ಟೀಕಿಸಿದರು. ಸಂಜು ವಿಶ್ವಾದ್ಯಂತ ₹586.85 ಕೋಟಿಗಿಂತ ಹೆಚ್ಚು ಹಣಗಳಿಸಿತು, ಮತ್ತು ೨೦೧೮ರ ಅತಿ ಹೆಚ್ಚು ಹಣಗಳಿಸಿದ ಬಾಲಿವುಡ್ ಚಿತ್ರವಾಗಿ ಹೊರಹೊಮ್ಮಿತು. ೬೪ನೇ ಫಿಲ್ಮ್‌ಫೇರ್ ಪ್ರಶಸ್ತಿ ಸಮಾರಂಭದಲ್ಲಿ ಸಂಜು ಅತ್ಯುತ್ತಮ ಚಲನಚಿತ್ರ ಮತ್ತು ಹಿರಾನಿಯವರಿಗೆ ಅತ್ಯುತ್ತಮ ನಿರ್ದೇಶಕ ಪ್ರಶಸ್ತಿ ಸೇರಿದಂತೆ ಏಳು ನಾಮನಿರ್ದೇಶನಗಳನ್ನು ಪಡೆಯಿತು. ಈ ಚಿತ್ರವು ಕಪೂರ್‌ರಿಗೆ ಅತುತ್ತಮ ನಟ ಪ್ರಶಸ್ತಿ ಮತ್ತು ಕೌಶಲ್‍ರಿಗೆ ಅತ್ಯುತ್ತಮ ಪೋಷಕ ನಟ ಪ್ರಶಸ್ತಿಯನ್ನು ಗೆದ್ದುಕೊಟ್ಟಿತು. == ಕಥಾವಸ್ತು == ಸಂಜಯ್ "ಸಂಜು" ದತ್‍ (ರಣ್‍ಬೀರ್ ಕಪೂರ್) ಮೇಲೆ ಜೀವನಚರಿತ್ರೆಯನ್ನು ಬರೆದ ಗೀತಸಾಹಿತಿ ಡಿ. ಎನ್. ತ್ರಿಪಾಠಿ (ಪೀಯುಷ್ ಗೋಯಲ್) ಅವನನ್ನು ಮಹಾತ್ಮ ಗಾಂಧಿಗೆ ಹೋಲಿಸುವುದರೊಂದಿಗೆ ಚಿತ್ರವು ಶುರುವಾಗುತ್ತದೆ. ದಂಗುಬಡಿದ ಸಂಜಯ್ ಅವನನ್ನು ಹೊರಹಾಕಿಸುತ್ತಾನೆ. ಬಾಂಬೆ ಉಚ್ಚ ನ್ಯಾಯಾಲವು ೧೯೯೩ರ ಬಾಂಬೆ ಬಾಂಬ್ ಸ್ಫೋಟಗಳ ಸಂಬಂಧವಾಗಿ ತನ್ನ ತೀರ್ಪನ್ನು ನೀಡುತ್ತದೆ ಮತ್ತು ಶಸ್ತ್ರಾಸ್ತ್ರಗಳ ಕಾಯ್ದೆ, ೧೯೫೯ವನ್ನು ಉಲ್ಲಂಘಿಸಿದ್ದಕ್ಕೆ ದತ್‍ಗೆ ಐದು ವರ್ಷಗಳ ಜೈಲು ಶಿಕ್ಷೆಯನ್ನು ನೀಡುತ್ತದೆ. ಅವನ ಹೆಂಡತಿ ಮಾನ್ಯತಾ ದತ್ (ದಿಯಾ ಮಿರ್ಜ಼ಾ) ಲಂಡ‍ನ್‍ನಲ್ಲಿ ನೆಲೆಸಿದ ಬರಹಗಾರ್ತಿ ವಿನಿ ಡಯಾಜ಼್‍ಳೊಂದಿಗೆ ಸಂಜಯ್‍ನ ಜೀವನಚರಿತ್ರೆಯನ್ನು ಬರೆದು ಸಾರ್ವಜನಿಕರಿಗೆ ಅವನ ಜೀವನದ ಅವನ ವಿವರಣೆಯನ್ನು ಪ್ರಸ್ತುತಪಡಿಸುವ ಬಗ್ಗೆ ಮಾತನಾಡುತ್ತಾಳೆ. ಮೊದಲು ಇಷ್ಟವಿಲ್ಲದಿದ್ದರೂ, ಜೀವನಚರಿತ್ರೆಯನ್ನು ಬರೆಯಬಾರದೆಂದು ಸ್ಥಿರಾಸ್ತಿ ನಿರ್ಮಾಪಕ ಜ಼ುಬಿನ್ ಮಿಸ್ತ್ರಿ (ಜಿಮ್ ಸರ್ಭ್) ಅವಳನ್ನು ಕೇಳಿಕೊಳ್ಳುತ್ತಾನೆ. ಇದು ಅವಳ ಕುತೂಹಲವನ್ನು ಕೆರಳಿಸುತ್ತದೆ. ವಿನಿ ಮೊದಲ ಬಾರಿಗೆ ಸಂಜಯ್‍ನನ್ನು ಸಂದರ್ಶಿಸುತ್ತಾಳೆ, ಮತ್ತು ಅವನ ಜೀವನವನ್ನು ಹಿನ್ನೋಟದ ನಿರೂಪಣೆಯಲ್ಲಿ ಬಹಿರಂಗಗೊಳಿಸಲಾಗುತ್ತದೆ. ಸಂಜಯ್‍ನ ತಂದೆ ಸುನಿಲ್ ದತ್ (ಪರೇಶ್ ರಾವಲ್) ರಾಕಿ (೧೯೮೧) ಚಲನಚಿತ್ರದ ಮೂಲಕ ಬಾಲಿವುಡ್‍ನಲ್ಲಿ ಅವನ ನಟನಾ ವೃತ್ತಿಜೀವನವನ್ನು ಆರಂಭಿಸಲು ಯೋಜಿಸುತ್ತಾನೆ. ಸೆಟ್‍ನಲ್ಲಿ ತನ್ನ ತಂದೆಯ ನಿಯಂತ್ರಿಸುವ ವರ್ತನೆಯಿಂದ ಬೇಸರಗೊಂಡು, ಸಂಜಯ್‍ನ ಮಿತ್ರ ಜ಼ುಬಿನ್ "ಗಾಡ್" ಮಿಸ್ತ್ರಿ ಮೊದಲ ಬಾರಿಗೆ ಮಾದಕವಸ್ತುಗಳನ್ನು ಪ್ರಯತ್ನಿಸುವಂತೆ ಅವನಿಗೆ ಪ್ರೋತ್ಸಾಹಿಸುತ್ತಾನೆ. ತನ್ನ ತಾಯಿ ನರ್ಗಿಸ್ (ಮನೀಶಾ ಕೋಯಿರಾಲಾ) ಕ್ಯಾನ್ಸರ್‌ನಿಂದ ನರಳುತ್ತಿದ್ದಾಳೆ ಎಂದು ಸಂಜಯ್‍ಗೆ ಶೀಘ್ರದಲ್ಲೇ ಗೊತ್ತಾಗುತ್ತದೆ ಮತ್ತು ಅವಳನ್ನು ಚಿಕಿತ್ಸೆಗಾಗಿ ನ್ಯೂ ಯಾರ್ಕ್‌ಗೆ ಕರೆದೊಯ್ಯಲಾಗುತ್ತದೆ. ಈ ಘಟನೆಯು ಕುಡಿತ ಮತ್ತು ಮಾದಕವಸ್ತು ವ್ಯಸನದೊಳಗೆ ಅವನ ಪತನವನ್ನು ಮತ್ತಷ್ಟು ಹೆಚ್ಚಿಸುತ್ತದೆ. ನ್ಯೂ ಯಾರ್ಕ್‌ನಲ್ಲಿ, ನರ್ಗಿಸ್‍ನ ಅಭಿಮಾನಿಯಾದ ಕಮ್ಲೇಶ್‍ನನ್ನು ಅವನು ಭೇಟಿಯಾಗುತ್ತಾನೆ, ಮತ್ತು ಅವರು ಬೇಗನೇ ಗೆಳೆಯರಾಗುತ್ತಾರೆ. ಸಂಜಯ್ ತನ್ನ ವ್ಯಸನವನ್ನು ನಿಲ್ಲಿಸುವಂತೆ ಮಾಡುವಲ್ಲಿ ಕಮ್ಲೇಶ್ ಯಶಸ್ವಿಯಾಗುತ್ತಾನೆ; ತನ್ನ ನಡೆಯುತ್ತಿರುವ ಮಾದಕವಸ್ತು ವ್ಯಸನದ ಕಾರಣ ತನ್ನ ಗೆಳತಿ ರೂಬಿಯ (ಸೋನಮ್ ಕಪೂರ್) ವಿವಾಹ ಗೊತ್ತಾಗಿರುವುದು ತಿಳಿದ ನಂತರ, ಸಂಜಯ್ ಮತ್ತೆ ವ್ಯಸನಿಯಾಗುತ್ತಾನೆ. ಸಂಜಯ್‍ನನ್ನು ರಿಜಿಸ್ಟರ್ ಮದುವೆಯಾಗುವಂತೆ ಕಮ್ಲಿ ರೂಬಿಗೆ ಮನವರಿಕೆ ಮಾಡುತ್ತಾನೆ; ಅವನ ಅಮಲೇರಿದ ವರ್ತನೆಯಿಂದ ಬೇಜಾರಾಗಿ, ಅವಳು ಅವನನ್ನು ಬಿಡುತ್ತಾಳೆ. ನರ್ಗಿಸ್ ರಾಕಿ ಚಿತ್ರದ ಬಿಡುಗಡೆಗೆ ಮೂರು ದಿನ ಮುನ್ನ ಸಾವನ್ನಪ್ಪುತ್ತಾಳೆ. ಇದು ಸಂಜಯ್ ಮೇಲೆ ಭಾವನಾತ್ಮಕವಾಗಿ ಹಾನಿಯುಂಟುಮಾಡುತ್ತದೆ. ಸಂಜಯ್ ಅಮೇರಿಕದಲ್ಲಿನ ಒಂದು ಪುನಶ್ಚೇತನ ಕೇಂದ್ರಕ್ಕೆ ಹೋಗಲು ಒಪ್ಪುತ್ತಾನೆ, ಮತ್ತು ತನ್ನ ತಂದೆ ಹಾಗೂ ಕಮ್ಲೇಶ್‍ನ ಸಹಾಯದಿಂದ ಅಂತಿಮವಾಗಿ ಗುಣವಾಗುತ್ತಾನೆ. ಭಾರತಕ್ಕೆ ಮರಳಿದ ಮೇಲೆ, ಅವನು ಗಾಡ್‍ನನ್ನು ಭೇಟಿಯಾಗಿ ತನಗೆ ಮಾದಕವಸ್ತುಗಳನ್ನು ಮಾರಾಟಮಾಡಿದ್ದಕ್ಕಾಗಿ ಅವನಿಗೆ ಹೊಡೆಯುತ್ತಾನೆ. ದತ್‍ನ ಜೀವನದ ನಂತರದ ಭಾಗದ ಕಥೆಯನ್ನು ವಿನಿ ಪತ್ತೆಹಚ್ಚಿದ, ಈಗ ಬೇರ್ಪಟ್ಟ ಗೆಳೆಯ ಕಮ್ಲೇಶ್ ಹೇಳುತ್ತಾನೆ. ೧೯೯೦ರ ದಶಕದಲ್ಲಿ, ಸಂಜಯ್ ಶರೀರ ಬಲವರ್ಧನೆಯಲ್ಲಿ ತೊಡಗಿಸಿಕೊಳ್ಳುತ್ತಾನೆ ಮತ್ತು ಬಾಲಿವುಡ್‍ನಲ್ಲಿ ಅವನ ವೃತ್ತಿಯು ಬಹಳವಾಗಿ ಸುಧಾರಿಸಿರುತ್ತದೆ. ೧೯೯೨ರ ಬಾಬ್ರಿ ಮಸೀದಿ ವಿಧ್ವಂಸದ ನಂತರ, ಅಷ್ಟರಲ್ಲಿ ರಾಜಕೀಯದಲ್ಲಿ ಪ್ರವೇಶಿಸಿದ್ದ ತನ್ನ ತಂದೆ ಮತ್ತು ಸೋದರಿ ಪ್ರಿಯಾ ದತ್‍ಳ ರಕ್ಷಣೆಯನ್ನು ಖಚಿತಪಡಿಸಿಕೊಳ್ಳಲು ಸಂಜಯ್ ಮೂರು ಎಕೆ-೫೬ ಬಂದೂಕುಗಳನ್ನು ಪಡೆದುಕೊಳ್ಳುತ್ತಾನೆ. ಸ್ವಲ್ಪ ಸಮಯದ ನಂತರ, ಮುಂಬಯಿಯಲ್ಲಿ ಸರಣಿ ಬಾಂಬ್ ಸ್ಫೋಟಗಳಾಗುತ್ತವೆ. ಬಾಂಬ್ ಸ್ಫೋಟಗಳ ನಂತರ ಸಂಭಾವ್ಯ ಕೋಮು ಗಲಭೆಯ ಸಂದರ್ಭದಲ್ಲಿ ರಕ್ಷಣೆಗಾಗಿ ಕಳ್ಳಸಾಗಣೆ ಮಾಡಲಾದದ್ದು ಎಂಬ ಊಹೆ ಪ್ರಕಾರ, ಡಿ-ಕಂಪನಿ ಪೂರೈಕೆ ಮಾಡಿದ ಅಕ್ರಮ ಶಸ್ತ್ರಾಸ್ತ್ರಗಳನ್ನು ಹೊಂದಿರುವುದಕ್ಕೆ ೧೯೯೩ರಲ್ಲಿ ಸಂಜಯ್‍ನನ್ನು ಬಂಧಿಸಲಾಗುತ್ತದೆ. ಸಂಜಯ್ ಅಪರಾಧಿಯೆಂದು ತೀರ್ಮಾನವಾಗಿ ಭಯೋತ್ಪಾದಕ ಮತ್ತು ವಿನಾಶಕಾರಿ ಚಟುವಟಿಕೆಗಳ (ನಿಷೇಧ) ಕಾಯ್ದೆಯಡಿ ಅವನಿಗೆ ಐದು ವರ್ಷಗಳ ಜೈಲು ಶಿಕ್ಷೆಯಾಗಿ, ಅವನ ವೃತ್ತಿಜೀವನಕ್ಕೆ ಬೆದರಿಕೆಯುಂಟುಮಾಡುತ್ತದೆ. ಭಾರತದ ಮಾಧ್ಯಮಗಳು ಅವನಿಗೆ ಭಯೋತ್ಪಾದಕನೆಂಬ ಹಣೆಪಟ್ಟಿ ಕಟ್ಟುತ್ತದೆ. ಇದು ಅವನ ಸಾರ್ವಜನಿಕ ಅಭಿಪ್ರಾಯಕ್ಕೆ ಮತ್ತಷ್ಟು ಮಸಿ ಬಳಿಯುತ್ತದೆ. ಸಂಜಯ್ ತಪ್ಪಿತಸ್ಥನೆಂದು ನಂಬಿ, ಕಮ್ಲೇಶ್ ಅವನೊಂದಿಗೆ ಸಂಬಂಧವನ್ನು ಕಳೆದುಕೊಳ್ಳುತ್ತಾನೆ. ೧೯೯೫ರಲ್ಲಿ ಅವನ ಬಿಡುಗಡೆಯ ನಂತರ, ಸಂಜಯ್ ಅನೇಕ ವಿಫಲ ಚಿತ್ರಗಳಲ್ಲಿ ಕಾಣಿಸಿಕೊಳ್ಳುತ್ತಾನೆ. ಅವನ ಜನಪ್ರಿಯತೆಯು ಕುಗ್ಗಲು ಶುರುವಾಗಿದ್ದಾಗ, ತನ್ನ ತಂದೆ ಸಹನಟರಾಗಿರುವ ಮುನ್ನಾಭಾಯಿ ಎಮ್.ಬಿ.ಬಿ.ಎಸ್. (೨೦೦೩) ಚಿತ್ರದಲ್ಲಿ ಅವನನ್ನು ಶೀರ್ಷಿಕೆ ಪಾತ್ರಕ್ಕಾಗಿ ಸೇರಿಸಿಕೊಳ್ಳಲಾಗುತ್ತದೆ. ಸಂಜಯ್‍ನ ಅಭಿನಯವು ಅವನಿಗೆ ಹಾಸ್ಯ ಪಾತ್ರದಲ್ಲಿ ಅತ್ಯುತ್ತಮ ಅಭಿನಯಕ್ಕಾಗಿ ಫಿಲ್ಮ್‌ಫೇರ್ ಪ್ರಶಸ್ತಿಯನ್ನು ಗೆದ್ದುಕೊಡುತ್ತದೆ, ಮತ್ತು ಅವನ ಸಾರ್ವಜನಿಕ ಅಭಿಪ್ರಾಯವು ಸುಧಾರಿಸುತ್ತದೆ, ಮತ್ತು ತಂದೆಗೆ ಹೆಮ್ಮೆಯೆನಿಸುತ್ತದೆ. ಅದಾದ ಸ್ವಲ್ಪ ಸಮಯದಲ್ಲೇ, ಅವನ ತಂದೆ ನಿಧನರಾಗುತ್ತಾರೆ. ೨೦೦೬ರಲ್ಲಿ, ಬಾಂಬೆ ಉಚ್ಚ ನ್ಯಾಯಾಲಯವು ಶಸ್ತ್ರಾಸ್ತ್ರಗಳ ಸುಪರ್ದು ಕಾಯ್ದೆಯಡಿ ದತ್‍ನನ್ನು ತಪ್ಪಿತಸ್ಥನೆಂದು ನಿರ್ಣಯಿಸುತ್ತದೆ, ಆದರೆ ಅವನು ಭಯೋತ್ಪಾದಕನಲ್ಲ ಎಂದು ನಿರ್ಣಯಿಸುತ್ತದೆ. ೨೦೧೩ರಲ್ಲಿ, ಸರ್ವೋಚ್ಚ ನ್ಯಾಯಾಯಲವು ಎತ್ತಿಹಿಡಿದ ಅದೇ ನಿರ್ಣಯದ ಮೂಲಕ ಅವನನ್ನು ಮತ್ತೊಮ್ಮೆ ಬಂಧಿಸಲಾಗುತ್ತದೆ. ತನ್ನ ಮೇಲೆ ಭಯೋತ್ಪಾದನೆಯ ಬಗ್ಗೆ ತಪ್ಪಾಗಿ ಆರೋಪಗಳನ್ನು ಹೊರಿಸಿದ ಮಾಧ್ಯಮಗಳನ್ನು ದೂಷಿಸಿ, ಸಂಜಯ್ ವಿನಿ ಮತ್ತು ಕಮ್ಲೇಶ್‍ಗೆ ತನ್ನ ಮುಗ್ಧತೆಯ ಬಗ್ಗೆ ಮನವರಿಕೆ ಮಾಡಿಕೊಡುತ್ತಾನೆ. ತರುವಾಯ ಅವನನ್ನು ೨೦೧೬ರಲ್ಲಿ ಸೆರೆಮನೆಯಿಂದ ಬಿಡುಗಡೆಗೊಳಿಸಲಾಗುತ್ತದೆ. ವಿನಿ ಅಮರ್ ಪ್ರೇಮ್ (೧೯೭೨) ಚಿತ್ರದ ತನ್ನ ತಂದೆಯ ಅಚ್ಚುಮೆಚ್ಚಿನ ಹಾಡುಗಳಲ್ಲಿ ಒಂದಾದಕುಛ್ ತೋ ಲೋಗ್ ಕಹೇಂಗೆ (ಅನುವಾದ: ಜನರು ಏನಾದರೂ ಹೇಳುತ್ತಿರುತ್ತಾರೆ) ಎಂಬ ಶೀರ್ಷಿಕೆಯ ತನ್ನ ಜೀವನಚರಿತ್ರೆಯನ್ನು ಬರೆಯುವುದು ಮುಗಿಸಿದ್ದಾಳೆ ಎಂದು ಸಂಜಯ್‍ಗೆ ಗೊತ್ತಾಗುತ್ತದೆ. ಅವನು ಜೈಲಿನಿಂದ ಹೊರಬಂದು ಕಮ್ಲೇಶ್ ಹಾಗೂ ಮಾನ್ಯತಾರೊಂದಿಗೆ ಮತ್ತೆ ಸೇರುತ್ತಾನೆ. == ಪಾತ್ರವರ್ಗ == == ತಯಾರಿಕೆ == === ಬೆಳವಣಿಗೆ === ದತ್‍ನ ಹೆಂಡತಿ ಮಾನ್ಯತಾ ದತ್ ಸಂಜಯ ದತ್‍ನ ಜೀವನವನ್ನು ಆಧರಿಸಿದ ಚಲನಚಿತ್ರವನ್ನು ಸೃಷ್ಟಿಸುವಂತೆ ಅನುದ್ದೇಶಿತ ಸಂಭಾಷಣೆಯಲ್ಲಿ ನಿರ್ದೇಶಕ ರಾಜ್‍ಕುಮಾರ್ ಹಿರಾನಿಯವರಿಗೆ ಮೊದಲು ಪ್ರೇರಿಸಿದರು. ಸಂಜುನ ಜಗತ್ತು ನನ್ನ ಜಗತ್ತಿನಿಂದ ಬಹಳ ಭಿನ್ನವಾಗಿದೆ ಎಂದು ಹೇಳಿ ಈ ಪ್ರಸ್ತಾಪವನ್ನು ಅವರು ನಿರಾಕರಿಸಿದರು. ಆದರೆ ಅಂತಿಮವಾಗಿ ಚಿತ್ರ ತಯಾರಿಸಲು ನಿರ್ಧರಿಸಿದರು. ಚಿತ್ರ ನಿರ್ಮಾಣಕ್ಕೆ ಸಂಪನ್ಮೂಲಗಳನ್ನು ಪಡೆಯಲು ದತ್‍ನ ಜೊತೆಗೆ ಕುಳಿತುಕೊಂಡು ಎಲ್ಲವನ್ನೂ ದಾಖಲಿಸಿಕೊಂಡರು ಮತ್ತು ಅವರ ಪರಿಚಯವಿದ್ದ ಇತರರನ್ನೂ ಭೇಟಿಯಾದರು — ಪತ್ರಕರ್ತರು, ಪೋಲೀಸರು, ನೆಂಟರು ಮತ್ತು ಗೆಳೆಯರು. ಆರಂಭದಲ್ಲಿ ಹಿರಾನಿ ನಿರ್ಮಾಪಕ ವಿಧು ವಿನೋದ್ ಚೋಪ್ರಾರನ್ನು ಚಿತ್ರವನ್ನು ತಯಾರಿಸಲು ಸಮೀಪಿಸಿದಾಗ ಅವರು ಯೋಜನೆಯ ಭಾಗವಾಗಿರಲಿಲ್ಲ. ಆದರೆ ದತ್ ಹೇಳಿದ ಎಲ್ಲ ಸಂಗತಿಗಳು ನಿಜವೆಂದು ಅರಿವಾದ ಮೇಲೆ ಒಪ್ಪಿದರು. ಸಾರ್ವಜನಿಕರಿಗೆ ಗೊತ್ತಾಗಾಲು ಸಾಧ್ಯವಿಲ್ಲದ ದತ್‍ನ ಜೀವನದ ಅಂಶಗಳನ್ನು ಹಿರಾನಿ ತೋರಿಸಿದರು. ಚಿತ್ರವು ಅವರ ಪ್ರಣಯದ ಬಗ್ಗೆ ಅಲ್ಲ. ಇದು ಮುಖ್ಯವಾಗಿ ಎರಡು ಜಾಡುಗಳನ್ನು ಹೊಂದಿದೆ, ಒಂದು ಬಂದೂಕಿನ ಕಥೆ ಮತ್ತು ಇನ್ನೊಂದು ಮಾದಕವಸ್ತುಗಳ ಕಥೆ ಮತ್ತು ಅವರು ಈ ಎರಡು ಯುದ್ಧಗಳನ್ನು ಹೇಗೆ ಹೋರಾಡಿದರು ಎಂಬ ಬಗ್ಗೆ ಇದೆ ಎಂದು ಹಿರಾನಿ ಹೇಳಿದರು. === ಪಾತ್ರ ನಿರ್ಧಾರಣ === ದತ್‍ನ ಪಾತ್ರವಹಿಸಲು ನಟ ರಣ್‌ಬೀರ್ ಕಪೂರ್ ಹಿರಾನಿಯವರ ಮೊದಲ ಆಯ್ಕೆಯಾಗಿದ್ದರು. ಸರಿಯಾದ ದೈಹಿಕತೆ ಪಡೆಯಲು ರಣ್‍ಬೀರ್ ಕಪೂರ್ ಬಹಳ ಕಷ್ಟಪಟ್ಟರು ಮತ್ತು ಸರಿಯಾದ ಸಮತೋಲನವನ್ನು ಕಂಡುಹಿಡಿಯಲು ಅನೇಕ ದಿನ ವೀಡಿಯೊಗಳನ್ನು ನೋಡಿದರು. ಆರಂಭದಲ್ಲಿ ಪಾತ್ರವನ್ನು ಮಾಡಲು ಕಪೂರ್‌ಗೆ ಮನಸ್ಸಿರಲಿಲ್ಲ. ಆದರೆ ಚಿತ್ರದ ಬಗ್ಗೆ ಮತ್ತಷ್ಟು ತಿಳಿದ ಮೇಲೆ ಒಪ್ಪಿದರು. ದತ್‍ನ ಪಾತ್ರಕ್ಕೆ ರಣ್ವೀರ್ ಸಿಂಗ್ ಹೆಚ್ಚು ಉತ್ತಮ ಜೋಡಿ ಎಂದು ಚೋಪ್ರಾ ನಂಬಿದ್ದರು. ಆದರೆ ಒಮ್ಮೆ ಚಿತ್ರೀಕರಣ ಆರಂಭವಾಗಿ ಕಪೂರ್‌ರ ಸಾಮರ್ಥ್ಯಗಳನ್ನು ಕಣ್ಣಾರೆ ನೋಡಿದಾಗ ತಮ್ಮ ಹೇಳಿಕೆಯನ್ನು ಹಿಂತೆಗೆದುಕೊಳ್ಳಬೇಕಾಯಿತು. ಕಪೂರ್‌ರಂತೆ, ಕೊಯಿರಾಲಾ ಕೂಡ ಅದೇ ರೀತಿಯ ಪಾತ್ರಮಾಡುವ ಭಯದ ಕಾರಣ ಕಪೂರ್‌ರ ತಾಯಿಯ ಪಾತ್ರವಹಿಸುವ ಬಗ್ಗೆ ಸಂದೇಹಾತ್ಮಕವಾಗಿದ್ದರು. ದತ್‍ರ ತಂದೆ ಸುನಿಲ್ ದತ್‍ರ ಪಾತ್ರ ಮಾಡಲು ಆಮಿರ್ ಖಾನ್‌ರಿಗೂ ಪ್ರಸ್ತಾಪ ಮಾಡಲಾಯಿತು. ಆದರೆ ಅವರು ದಂಗಲ್ ಚಿತ್ರದಲ್ಲಿ ತಂದೆಯ ಪಾತ್ರ ಮಾಡುತ್ತಿದ್ದುದರಿಂದ ಅದನ್ನು ನಿರಾಕರಿಸಿದರು. ನಂತರ ಆ ಪಾತ್ರವನ್ನು ಪರೇಶ್ ರಾವಲ್‍ಗೆ ನೀಡಲಾಯಿತು. === ಪಾತ್ರಗಳು === ರಣ್‍ಬೀರ್ ಕಪೂರ್ ವಿನಂತಿಸಿಕೊಂಡಿದ್ದಕ್ಕೆ ದತ್ ಆಗಿ ರೂಪಾಂತರವನ್ನು ಪೂರ್ಣಗೊಳಿಸುವುದಕ್ಕೆ ಪ್ರತಿ ಹಂತದ ನಡುವೆ ತಿಂಗಳ ಬಿಡುವನ್ನು ನೀಡಲಾಗಿತ್ತು. ರಣ್‍ಬೀರ್ ಕಪೂರ್‌ನ ಮುಖ ಹಾಗೂ ವಯಸ್ಸು ದತ್‍ರದನ್ನು ಹೋಲುವಂತೆ ಮಾಡಲು ಕೃತಕ ಅಂಗಗಳನ್ನು ಬಳಸಲಾಯಿತು. ವಯಸ್ಸಾದ ಪಾತ್ರಕ್ಕಾಗಿ ಕೃತಕ ಅಂಗಗಳ ಮೇಕಪ್ ಮಾಡಲು ಐದು ಆರು ಗಂಟೆ ಬೇಕಾಗಿದ್ದರಿಂದ ಕಪೂರ್ ಸ್ಥಳಕ್ಕೆ ಮೊದಲು ಬರುತ್ತಿದ್ದರು. ತಮ್ಮ ದೇಹವನ್ನು ದತ್‍ರದಂತೆ ಬೆಳೆಸಲು, ತ್ಯಾಗ ಮತ್ತು ಶಿಸ್ತು ಬೇಕಾಯಿತು. ದಿನಕ್ಕೆ ೮ ಊಟಗಳನ್ನು ಮಾಡುತ್ತಿದ್ದರು ಮತ್ತು ಪ್ರೋಟೀನ್ ಶೇಕ್ ಕುಡಿಯಲು ಬೆಳಿಗ್ಗೆ ೩ಕ್ಕೆ ಏಳುತ್ತಿದ್ದರು. ನರ್ಗಿಸ್‍ರ ಪಾತ್ರಮಾಡಲು ಕೊಯಿರಾಲಾ ವಿವಿಧ ಭಾವಚಿತ್ರಗಳು, ಪುಸ್ತಕಗಳು ಮತ್ತು ಸಾಕ್ಷ್ಯಚಿತ್ರವನ್ನು ಅಧ್ಯಯನ ಮಾಡುವ ಮೂಲಕ ನರ್ಗಿಸ್‍ರ ಬಗ್ಗೆ ಬಹಳಷ್ಟು ಸಂಶೋಧನೆ ಮಾಡಿದರು. ವಿಕಿ ಕೌಶಲ್ ತಮ್ಮ ಪಾತ್ರಮಾಡಲು ಸೂರತ್‍ಗೆ ಹೋಗಿ ಗುಜರಾತಿಗಳ ದೈಹಿಕ ಹಾವಭಾವ ಹಾಗೂ ವಿಲಕ್ಷಣತೆಯನ್ನು ಅಧ್ಯಯನ ಮಾಡಿದರು. ತೆಳ್ಳಗಿನ ಯುವ ಗುಜರಾತಿ ವ್ಯಕ್ತಿಯಾಗಿ ಕಾಣಲು ಮತ್ತು ವರ್ತಮಾನದ ವಯಸ್ಸಾದ ವ್ಯಕ್ತಿಯಾಗಿ ಕಾಣಲು ಭಾರೀ ದೈಹಿಕ ಪರಿವರ್ತನೆಗೆ ಒಳಗಾಗಬೇಕಾಯಿತು. === ಪ್ರಧಾನ ಛಾಯಾಗ್ರಹಣ === ಚಿತ್ರದ ಚಿತ್ರೀಕರಣವು ೧೨ ಜನವರಿ ೨೦೧೭ರಂದು ಆರಂಭವಾಯಿತು. ಚಿತ್ರೀಕರಣವನ್ನು ೨೧ ಜನವರಿ ೨೦೧೮ರಂದು ಮುಗಿಸಲಾಯಿತು. == ಧ್ವನಿವಾಹಿನಿ == ಚಿತ್ರದ ಧ್ವನಿವಾಹಿನಿಯಲ್ಲಿ ಎ. ಆರ್. ರೆಹಮಾನ್, ರೋಹನ್-ರೋಹನ್ ಹಾಗೂ ವಿಕ್ರಮ್ ಮಾಂಟ್ರೋಸ್ ಸಂಯೋಜಿಸಿದ ೬ ಹಾಡುಗಳು ಇವೆ. ಗೀತೆಗಳ ಸಾಹಿತ್ಯವನ್ನು ಇರ್ಷಾದ್ ಕಾಮಿಲ್, ಶೇಖರ್ ಅಸ್ತಿತ್ವ, ಪುನೀತ್ ಶರ್ಮಾ, ರೋಹನ್ ಗೋಖಲೆ ಹಾಗೂ ಅಭಿಜಾತ್ ಜೋಶಿ ಬರೆದಿದ್ದಾರೆ. ಹಿನ್ನೆಲೆ ಸಂಗೀತವನ್ನು ಸಂಜಯ್ ವಾಂಡ್ರೇಕರ್ ಹಾಗೂ ಅತುಲ್ ರಣಿಂಗಾ ಸಂಯೋಜಿಸಿದ್ದಾರೆ. ಚಿತ್ರದ ಧ್ವನಿಸುರುಳಿಯನ್ನು ೨೯ ಜೂನ್ ೨೦೧೮ರಂದು ಬಿಡುಗಡೆ ಮಾಡಲಾಯಿತು. == ಮಾರಾಟಗಾರಿಕೆ ಮತ್ತು ಬಿಡುಗಡೆ == ಚಿತ್ರದ ಸಣ್ಣ ಅಧಿಕೃತ ತುಣುಕನ್ನು ೨೪ ಎಪ್ರಿಲ್ ೨೦೧೮ರಂದು ಬಿಡುಗಡೆ ಮಾಡಲಾಯಿತು. ಅಧಿಕೃತ ಮಾದರಿ ತುಣಕನ್ನು ೨೦ ಮೇ ೨೦೧೮ರಂದು ಬಿಡುಗಡೆ ಮಾಡಲಾಯಿತು. ಮಾರಾಟಗಾರಿಕೆಯ ಭಾಗವಾಗಿ ಚಿತ್ರದ ಅನೇಕ ಪೋಸ್ಟರ್‌ಗಳನ್ನು ಒಂದಾದ ಮೇಲೆ ಒಂದರಂತೆ ಬಿಡುಗಡೆ ಮಾಡಲಾಯಿತು. ಬಹಳಷ್ಟು ಕಪೂರ್‌ರನ್ನು ಹೊಂದಿದ್ದರೆ ಕೆಲವು ಚಿತ್ರದ ಇತರ ನಟರನ್ನು ಹೊಂದಿದ್ದವು. == ಬಾಕ್ಸ್ ಆಫ಼ಿಸ್ == ಸಂಜು ಚಿತ್ರದ ಅಂತಿಮ ವಿಶ್ವಾದ್ಯಂತ ಒಟ್ಟು ಗಳಿಕೆ ₹586.85 ಕೋಟಿಯಷ್ಟಾಯಿತು (ಯುಎಸ್$82 ಮಿಲಿಯನ್). == ವಿಮರ್ಶಾತ್ಮಕ ಪ್ರತಿಕ್ರಿಯೆ == ಸಂಜು ವಿಮರ್ಶಕರಿಂದ ಬಹುತೇಕವಾಗಿ ಸಕಾರಾತ್ಮಕ ವಿಮರ್ಶೆಗಳನ್ನು ಪಡೆಯಿತು, ಕಪೂರ್‌ರ ಅಭಿನಯ ಮತ್ತು ಹಿರಾನಿಯ ನಿರ್ದೇಶನವನ್ನು ವಿಶೇಷವಾಗಿ ಪ್ರಶಂಸಿಸಲಾಯಿತು. == ಉಲ್ಲೇಖಗಳು == == ಬಾಹ್ಯ ಸಂಪರ್ಕಗಳು == ಸಂಜು @ ಐ ಎಮ್ ಡಿ ಬಿ ಸಂಜು ಬಾಕ್ಸ್ ಆಫ಼ೀಸ್ ಮೋಜೊದಲ್ಲಿ ಸಂಜು (ಚಲನಚಿತ್ರ)